24 October 2022

ತಾಳ್ಮೆ

ತಿಳಿ‌ ಸಂಜೆಯ‌ ಮುಸುಕು
ಬಾನಿಗೇರಿದೆ.
ಸುತ್ತಿ ಸೋತು ಧೂಳು
ಎಲೆಗಳ ಮುತ್ತಿದೆ.

ಹಲ್ಲಿನ ಬಿಗಿತವ,
ಉಸಿರಿಗೂ ತಿಳಿಸದೆ.
ಅಚಲ ಹಿಡಿತದಿ,
ಮರೆಯಲ್ಲಿ ಕುಳಿತಿದೆ.

ಹುಲಿ, ಬೇಟೆಗೆ
ಕಾಯುತಿದೆ.

ಹಸಿದ ಕಂಗಳಲ್ಲಿ
ಕೋಪ ಕುದಿಯುತಿದೆ.
ಕಾಯುದೊಂದೆ ಅದರ 
ತಲೆಯಲ್ಲಿದೆ.

ತಾಳ್ಮೆ, ಪಂಜಿಗಿಂತಲೂ,
ಮಾರಣಾಂತಿಕ ಎಂದು
ಅದಕೆ‌ ತಿಳಿದಿದೆ.

ಆಪತ್ತಿನ ನಿರೀಕ್ಷೆಯಲಿ,
ಕಾಗೆಗಳು ಶೆಟೆದು 
ಶಾಂತವಾಗಿವೆ.
ನಿಟ್ಟುಸಿರಿಗೆ,
ಸುತ್ತಲಿನ ನೊಣಗಳು,
ಬೆಂದು‌ ಬೆಂಡಾಗಿವೆ.

ದೂರದಲ್ಲೆಲ್ಲೋ,
ತೋಳವೊಂದು ಕೂಗುತಿದೆ.
ಪರಿಸ್ಥಿತಿಯ ಗಾಂಭೀರ್ಯ
ಅದಕ್ಕೆ ಮಾತ್ರ ತಿಳಿದಿದೆ.

ಬೇರಾವ ಪ್ರಾಣಿಗೂ,
ಪಿಸುಗುಡಲೂ ಧೈರ್ಯವಿಲ್ಲ.
ಇವತ್ತಿನ ರಾತ್ರಿಯೂಟಕ್ಕೆ
ಬೇಟೆ ಅವುಗಳಾಗ ಬೇಕಿಲ್ಲ.

ಜೀವ ಹೋಗುವ ಮುನ್ನವೇ,
ಸೂತಕದ ಛಾಯೆ ಆವರಿಸಿದೆ.
ರಣ-ಬೇಟೆಗಾರನ ಹಸಿವಿಗೆ
ಇಡೀ ಕಾಡೇ‌ ಶರಣಾಗಿದೆ.